ಹಸಿರು ತೋರಣಗಳಿಂದ ಕಂಗೊಳ್ಳಿಸುತ್ತಿದ್ದ ರಸ್ತೆಗಳು. ಮನೆಯ ಮುಂದೆ ಆಕರ್ಷಕ ರಂಗೋಲಿಯ ಚಿತ್ತಾರ. ಕಣ್ಣಾಡಿಸಿದಷ್ಟು ಜನಸಾಗರ. ಡೊಳ್ಳು ಕುಣಿತ ಹಾಗೂ ವೀರಗಾಸೆಯವರ ನರ್ತನ. ಅಲ್ಲಿ ಊರಹಬ್ಬದ ಸಡಗರ. ಈ ಸಂಭ್ರಮದ ನಡುವೆ ಶಿವಲಿಂಗಪ್ಪ ಅರ್ಪಿಸುವ, ಗುರುರಾಜ ಫ಼ಿಲಂಸ್ ಲಾಂಛನದಲ್ಲಿ ಶ್ರೀಮತಿ ಪರಿಮಳಾಜಗ್ಗೇಶ್ ಹಾಗೂ ಜಗ್ಗೇಶ್ ಅವರು ನಿರ್ಮಿಸುತ್ತಿರುವ ‘ಬಾಡಿಗಾರ್ಡ್ ಚಿತ್ರಕ್ಕಾಗಿ ವಿ.ಮನೋಹರ್ ಬರೆದಿರುವ ‘ನಂಬಿದವರ ಮನೆಯ ಬಳಿಗೆ ತುಂಬಿ ತುಳುಕಾಡು ಬಾಪ್ಪ ಸಿದ್ದಯ್ಯಸ್ವಾಮಿ ಬನ್ನಿ ಎಂದು ಆರಂಭವಾಗುವ ಗೀತೆಯ ಚಿತ್ರೀಕರಣ. ಜಗ್ಗೇಶ್, ಗುರುದತ್, ಜಯಶ್ರೀ, ಜೀವನ್, ಡೈಸಿ ಶಾ, ಬ್ಯಾಂಕ್ ಜನಾರ್ದನ್ ಹಾಗೂ ಅರವತ್ತಕ್ಕೂ ಅಧಿಕ ನೃತ್ಯಗಾರರು ಅಭಿನಯಿಸಿದ ಈ ಹಾಡಿನ ಚಿತ್ರೀಕರಣ ಬೆಳ್ಳೂರು ಕ್ರಾಸ್ ಬಳಿಯ ಆದಿಚುಂಚನಗಿರಿಯಲ್ಲಿ ನಡೆಯಿತು. ತ್ರಿಭುವನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದರು.
ಅಶೋಕ್ವಿರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿನಯ್ಚಂದ್ರ ಸಂಗೀತ ನೀಡಿದ್ದಾರೆ. ರಾಜೇಂದ್ರ ಕಾರಂತ್ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿರುವ ‘ಬಾಡಿಗಾರ್ಡ್ ಹಾಡುಗಳನ್ನು ಕವಿರಾಜ್, ರಾಂನಾರಾಯಣ್, ವಿ.ಮನೋಹರ್ ಬರೆದಿದ್ದಾರೆ. ಜಗ್ಗೇಶ್, ಡೈಸಿ ಶಾ, ಸ್ಪೂರ್ತಿ, ಸಾಧುಕೋಕಿಲಾ, ಬ್ಯಾಂಕ್ ಜನಾರ್ದನ್, ಗುರುದತ್, ಜಯಶ್ರೀ, ಜೀವನ್, ಅಲಿ, ವಿನಯ್ಚಂದ್ರ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.